Saturday, June 28, 2008

ಬರೆಯುತ್ತೇನೆ.....

ಬರೆಯುತ್ತೇನೆ
ನಿನ್ನನ್ನು ಮರೆಯಲೆಂದು...
ಆದರೆ
ಬರೆಯುತ್ತಾ ಬರೆಯುತ್ತಾ..
ಮರೆಯುತ್ತೇನೆ
ನಿನ್ನನ್ನು ಮರೆಯ ಬೇಕೆಂಬುದನ್ನು..!!!

Monday, June 16, 2008

ನೋವಾಗಲೇ ಬೇಕೇ?!

(ಸುಮ್ಮನೇ ಬರೆದದ್ದು)
ಬರೆಯಲು ನೋವಾಗಲೇ ಬೇಕೇ?
ಹೇ... ಮನಸೇ..
ಏನಿದು ವಿಚಿತ್ರ..!
ಬರೆ ಬೀಳಲೇ ಬೇಕೇ
ನೀನು ಸಂವೇದನೆಗೊಳ್ಳಲು.
ವೇದನೆಯೇ ಸಂವೇದನೆಯ ಮೊಲವೇ?!
ಹೊಡೆತ ಬೀಳಲೇ ಬೇಕೇ
ನೀ ಎಚ್ಚರಗೊಳ್ಳಲು.
ನಿನ್ನನ್ನು ನೀ ಕಂಡು ಕೊಳ್ಳಲು.
ಗಾಯ ವೃಣವಾಗಿ ಕೀವಾಗಿ ಸೋರ ಬೇಕೇ,
ನಿನ್ನೊಳಗಿನ ೊರತೆ ಒರೆಯಲು.
ನಾ ಬಿದ್ದು ತೊಳಲಲೇ ಬೇಕೇ
ನಿನ್ನೊಳಗಿನ ದನಿ ಅರಳಲು!
ಅರಳಿ ನನ್ನೊಳಗೆ ನಾ ಮರಳಲು...
ಎಂತಹ ವಿಚಿತ್ರ...!!!

ನೋವಿದೆ....ನಿಜ. ಆದರೆ ಅದಕ್ಕೂ ಮೀರಿದ.......

ನೋವಿದೆ....ನಿಜ..ಬೇಸರವೂ ಇದೆ.
ಅದಕ್ಕೆಲ್ಲಾ ಕಾರಣವೂ ಇದೆ.
ಅದರ ಮೊಲ ನಾನೆಂದೂ ಗೊತ್ತಿದೆ...
ಆದರೆ... ಗೊತ್ತಿರಲಿ ಹುಡುಗಿ..
ಅದೆಲ್ಲವನ್ನೂ ಮೀರಿದ ಒಲವೂ ನನ್ನಲ್ಲಿದೆ!!

ಗೊತ್ತಿದೆ; ನಿಜ! ನನ್ನಲ್ಲಿ ದ್ವಂದ್ವವಿದೆ,
ಚಂಚಲತೆಯಿದೆ.. ನಾ ದೃಢನಲ್ಲವೆಂದೂ ಗೊತ್ತಿದೆ.
ನಿನ್ನ ನೋವಿಗೆ ನಾನೇ ಕಾರಣವೆಂದೂ ಗೊತ್ತಿದೆ.
ಆದರೆ... ಗೊತ್ತಿರಲಿ ಗೆಳತಿ
ಅದನ್ನೆಲ್ಲಾ ಮೀರಿದ ಅಕ್ಕರೆಯಿದೆ.!!

ನಿನ್ನ ಮೌನದ ಹಿಂದಿನ ನೋವಿನ ಅರಿವಿದೆ.
ನಿನ್ನ ಬೇಸರದ ಹಿಂದಿನ ಒತ್ತಡದ ಒಳಸುಳಿ ತಿಳಿದಿದೆ.
ಅದರ ಬೇರೂ ನನ್ನಲ್ಲಿದೆಯೆಂಬುದೂ ಗೊತ್ತಿದೆ.
ಆದರೆ... ನನ್ನೊಲವೇ...
ಒಮ್ಮೆ ಹಾಗೆಯೇ ನೋಡು..
ಈ ಜೀವನವಿಡೀ ಮೊಗೆದರೂ ಬರಿದಾಗದ ಒಲವ ಒರತೆಯಿದೆ!!!

ಬಯ್ದು ಬಿಡು ಒಮ್ಮೆ..
ರೇಗಿ ಬಿಡು, ಕೂಗಾಡು, ಕಿರುಚಾಡು...
ಮೌನಿಯಾಗ ಬೇಡ..
ದಯವಿಟ್ಟು.... ಗೆಳತಿ..
ಮೌನಿಯಾಗ ಬೇಡ.

Saturday, June 14, 2008

ಜಿಟಿ ಜಿಟಿ ಮುಂಗಾರು ಮಳೆಯಂತಹವಳೇ........

ಹಾಯ್ ಈ ಜಿಟಿ ಜಿಟಿ ಮಳೆಗಿಂತಲೂ ಮನದೊಳಗೆ ಜಿಟಿ ಜಿಟಿ ಅನ್ನುವ ಮುಂಗಾರು ಮಳೆಯಂತಹವಳೇ, ಹೇಗಿದ್ದೀಯ! ನಿನಗೇನು ಚೆನ್ನಾಗೇ ಇರ್ತೀಯ ನಾನ್ತಾನೇ ಇಲ್ಲಿ ನಿನ್ನ ನೆನಪಲ್ಲಿ ಸಾಯುವವನು. ಕರುಣೆಯಿಲ್ಲದ ಕಟುಕಿಯೇ ಏಕೆ ಹೀಗೆ ನನ್ನೆದೆಯಲ್ಲಿ ಕುಟುಕುತ್ತೀಯೇ? ಚುಟುಕು ಪ್ರೀತಿಯೂ ಇಲ್ಲದವಳು. ಇರಲಿ ಬಿಡು ಏನು ಮಾಡಲಿಕ್ಕಾಗುತ್ತೆ, ಬಯಸಿ ಬಯಸಿ ಪಡೆದದ್ದಲ್ಲವೇ? ಅನುಭವಿಸ ಬೇಕು. ಯಾವ ಜನ್ಮದ ಕರ್ಮ ೀ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ ಕಾಣೆ. ಓ ಕೆ, ಓ ಕೆ. ಸಾರಿ ಸರೀನಾ? ಇವತ್ತು ಬೇರೇನೋ ಮಾತಾಡ್ಲಿಕ್ಕಂತ ಕುತವನು ನಿನ್ನ ಮೇಲಿನ ಸಿಟ್ಟಿಗೆ ಬೇರೇನೇನೋ ಮಾತಾಡ್ತಾ ಕೂತೆ. ಸರಿ ವಿಷಯಕ್ಕೆ ಬರ್ತೀನಿ ಸೀಮ್ ಬೆಳಿಗ್ಗೆಯಿಂದ ಒಬ್ಬನೇ ಇದ್ದೇನೆ ಈ ಮನೆಯಲ್ಲಿ ಒಂದು ನರ ಪ್ರಾನಿಯ ಸದ್ದೂ ಇಲ್ಲ. ಜಿಟಿ ಜಿಟಿ ಮಳೆ, ಅಲ್ಲೆಲ್ಲೋ ಕೂಗುವ ಹಕ್ಕಿಗಳ ದನಿ, ಬಿಟ್ಟರೆ ನಾನೊಬ್ಬನೇ. ಈ ಒಂಟಿತನವಿದೆಯಲ್ಲ ಸುಮ್ಮನಿದ್ದರೆ ನಮ್ಮನ್ನೇ ಕೊಲ್ಲುತ್ತದೆ, ಅದಕ್ಕೇ ನಾನೀ ಒಂಟಿತನವನ್ನ ಸುಂದರ ಏಕಾಂತವನ್ನಾಗಿ ಬದಲಾಯಿಸಿ ಕೊಳ್ಳುತ್ತೇನೆ. ನಿನಗೆ ಗೊತ್ತಾ ನಾನೀ ಏಕಾಂತದಲ್ಲಿದ್ದಾಗ ತೇಜಸ್ವಿ ಬಂದು ನನ್ನೊಟ್ಟಿಗೆ ಕೂರುತ್ತಾರೆ, ಮಂದಣ್ಣ, ಕರ್ವಾಲೋ, ಪೀರನೊಂದಿಗೆ. ಕಲ್ಲು ಕರಗುವ ಸಮಯದಲ್ಲೂ ಲಂಕೇಶ್ ಬಂದು ಬೇಸರ ಕಳೆಯತ್ತಾರೆ. ಅಯ್ಯೋ ಈ ಸಿಟ್ಟಿನ ಮೂಕಜ್ಜಿಯ ಮುದುಕನ ಕಾಟ ಅಳಿದ ಮೇಲೂ ತಪ್ಪಲ್ಲ. ಮರಳಿ ಮಣ್ಣಿಗೆ ಬರ್ತೇನೆ ಅಂತ ಹಠ ಹಿಡೀತಾನೆ, ಅದೆಂತಹಾ ಜೀವನ ಪ್ರೀತಿಯೋ ಈತನದ್ದು! ಹಾಗೆಯೇ ನಿನ್ನ ನೆನಪಾಗುತ್ತೆ, ಹಾಗೆಯೇ ಎಲ್ಲೋಮೂಲೆಯಿಂದ ಮಲ್ಲಿಗೆಯ ಘಮ ಮೂಗುಗಡರುತ್ತೆ. ತಿರುಗಿ ನೋಡಿದರೆ ಕೆ.ಎಸ್.ನ ಮೈಸೂರು ಮಲ್ಲಿಗೆ ಹಿಡಿದು ನಿಂತಿದ್ದಾರೆ. ಒಳಮನೆಯಲ್ಲಿ ಮತ್ತೇನೋ ಸದ್ದು ಎದ್ದು ನೋಡಿದರೆ ಈ ಕಾರ್ನಾಡರು ಬಿ. ವಿ ಕಾರಂತರೊಂದಿಗೆ ಸೇರಿ ಕೊಂಡು ಸುಬ್ಬಣ್ಣನನ್ನು ಕೂರಿಸಿ ಕೊಂಡು ನಾಟಕ ತಯಾರಿಯಲ್ಲಿದ್ದಾರೆ. ಅಯ್ಯೋ ಕರ್ಮವೇ ಅಂತ ತಿರುಗಿ ರೂಮಿಗೆ ಬಂದರೆ ರೂಮಿನ ತುಂಬೆಲ್ಲಾ ಇಲಿಗಳು ಅಯ್ಯೋ ಶಿವನೇ ಇದೇನು ಗ್ರಹಚಾರ ೆಂದು ಮಿಕಿ ಮಿಕಿ ನೋಡುತ್ತಿದ್ದರೆ ಕಿಂದರಿ ಜೋಗಿಯೊಂದಿಗೆ ನರೆಗೂದಲ ಚೆಲುವ ಕೈಯ್ಯಲ್ಲಿ ರಾಮಾಯಣ ದರ್ಶನಂ ಹಿಡಿದು ಹಾಜರ್. ಸದ್ಯ ಬದುಕುದೆ ಎಂದು ನಟ್ಟುಸಿರು ಬಿಡುತ್ತಾ ಕುಳಿತರೆ ಆದಿ ಪುರಾಣ ಆರಂಭವಾಗುತ್ತೆ, ಅದು ಮುಗಿಯುವಷ್ಟರಲ್ಲಿ ಯಾರದು ಎಂಟೆದೆಯುಳ್ಳವನು ಅಂತ ಬಳೆಗಾರ ಬೇರೆ ಬಾಗಿಲು ಬಡಿಯುತ್ತಿದ್ದಾನೆ. ಎಲಾ ಇವನಾ ಅಂತ ತಿರುಗಿದರೆ ಗಬ್ಬುನಾತದ ಅಷ್ಠಾವಕ್ರ ಹಾಜರಾಗ ಬೇಕೆ ಅವನನ್ನು ಸಾಗ ಹಾಕಿ ಕುಳಿತರೆ ರಗಳೆ ಆರಂಭ. ಅದನ್ನು ಬಗೆಹರಿಸಿ ಉಸ್ಸಪ್ಪಾ ಎನ್ನುವಷ್ಟರಲ್ಲಿ ಈ ಮುದ್ದಣ ಮನೋರಮೆಯರು ಒಬ್ಬರನ್ನೊಬ್ಬರು ಛೇಡಿಸುತ್ತಾ ನನ್ನ ರೂಮಿಗೇ ಬರಬೇಕೇ? ಓಹೋ?! ಇದೇನು ಕರ್ಮ ಮಾರಾಯ್ತಿ ನಾವಿಬ್ಬರು ಸೇರ ಬೇಕಾದ ಈ ರೂಮಿನಲ್ಲಿ ಇವರ್ಯಾರೋ ಬಂದು ಹಾಳು ಮಾಡ್ತಿದ್ದಾರೆ. ಸಾಕಾಗಿ ಹೋಯ್ತು. ಸಂಜೆಯಾಯ್ತು ಇನ್ಯಾರ ಕಾಟವೂ ನನಗಿಲ್ಲ ಅಂತ ಆನಂದ ಪಡುತ್ತಾ ಕೂತರೆ ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯೊಲ್ಸಾಕಿದ್ರೂನೂವೆ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ನನ್ನ ಮನಸನ್ನ ನೀ ಕಾಣೆ ಅಂತ ಹೆಂಡ್ಕುಡ್ಕ ಬಡ್ಕೊಳ್ತಿರೋದು ಕೇಳ್ಸುತ್ತೆ. ಿವರನ್ನೆಲ್ಲಾ ಸಂಭಾಳಿಸುವಷ್ಟರಲ್ಲಿ ಈ ರಷ್ಯಾದ ಹುಡುಗರು ದಸ್ತಾಯೇವ್ ಸ್ಕಿ, ತೊಲ್ ಸ್ತಾಯ್, ಗಾರಕಿ ಹಾಜರು. ಸೀಮ್ ದಯವಿಟ್ಟು ಬೇಗ ಬಂದು ನನ್ನನ್ನ ಿವರೆಲ್ಲರಿಂದ ಪಾರು ಮಾಡು. ನಿನಗೆ ಮಾತ್ರಾನೇ ಇವರು ಹೆದರೋದು. ನೀನು ಈ ರೂಮಿಗೆ ಬಂದ್ರೆ ಇವ್ರೆಲ್ಲಾ ಗಂಟು ಮೂಟೆ ಕಟ್ತಾರೆ ಬೇಗ ಬಾ ನನ್ನನ್ನು ಕಾಪಾಡು ನಿನಗೆ ಪುಣ್ಯ ಬರುತ್ತೆ......

Thursday, June 12, 2008

ನಾಚಿಕೆಯ ಬಗ್ಗೆ........

ಮೊನ್ನೆ ನಿನ್ನೊಂದಿಗೆ ಮಾತಾಡುವಾಗ ನಾಚಿಕೆಯ ಪ್ರಸ್ತಾಪವಾಗಿದ್ದು ನಿನಗೆ ನೆನಪಿರ ಬಹುದು. ಅದರ ಬಗ್ಗೆ ಯೋಚಿಸುತ್ತಿದ್ದೇನೆ, ನೀನು ಅಂದು ಹೇಳಿದ್ದು ನಿಜ ಸೀಮ್, ನಾಚಿಕೆಯೆಂಬ ಮೌಲ್ಯ ಕಡಿಮೆಯಾಗಿರುದೇ ಇಂದಿನ ಸಮಾಜದ ಸ್ವಾಸ್ಥ್ಯದ ಹದಗೆಡುವಿಕೆಗೆ ಕಾರಣ. ಇವತ್ತು ಮನುಷ್ಯ ಏನು ಮಾಡಲು ಹೇಸುತ್ತಿಲ್ಲ. ನಾಚಿಕೆ, ಅಂಜಿಕೆ ಮುಂತಾದವುಗಳು ಇಂದು ಮರೆಯಾಗಿತ್ತಿವೆ. ಅವುಗಳ ಜಾಗದಲ್ಲಿ ಮುನ್ನುಗ್ಗುವ ನೆಪದಲ್ಲಿ ಸ್ವೇಚ್ಛೆ, ನಿರ್ಲಜ್ಜತನ ಸ್ಥಾನ ಗಳಿಸಿವೆ. ನಾಚಿಕೆಯೆಂಬುದು ಒಂದು ಮೌಲ್ಯವೆಂಬ ಪರಿಕಲ್ಪನೆಯೇ ಇಲ್ಲವಾಗಿದೆ.ಹಾದರ, ವೈವಾಹಿಕೇತರ ಸಂಬಂಧಗಳು, ಹೀನ ವೃತ್ತಿಗಳು ಇವೆಲ್ಲಕ್ಕೂ ಇದೇ ಮೂಲ ಕಾರಣ ಎನಿಸುತ್ತಿದೆ. "ನಾಚಿಕೆ ಬಿಟ್ಟವರು ಊರಿಗೆ ದೊಡ್ಡವರು" ಎನ್ನೋ ಮಾತು ಇಂದಿನ ದಿನಗಳಲ್ಲಿ ಅಕ್ಷರಶ: ನಿಜವೆನಿಸುತ್ತಿದೆ. ಇತ್ತೀಚೆಗಿನ ಚುನಾವಣೆ, ಈಗಿನ ರಾಜಕೀಯವಂತೂ ಈ ಮಾತಿಗೆ ಅತ್ಯಂತ ಉತ್ತಮವಾದ ಉದಾಹರಣೆಯಾಗಿದೆ. ಅಂದ ಹಾಗೆ ಈಗಿನ ಹುಡುಗಿಯರಲ್ಲೂ ನಾಚಿಕೆಯೆಂಬುದು ವಿರಳವಾಗಿದೆಯೆಂದರೆ ನೀನು ಬೇಸರಿಸುವುದಿಲ್ಲವೆಂದು ಕೊಂಡಿದ್ದೇನೆ.(ಯಾಕಂದ್ರೆ ನಾಚಿಕೆ ಅಂದ್ರೇನು ಅಂತಾನೇ ನಿಂಗೊತ್ತಿಲ್ಲವಲ್ಲ!) ಮುಂದಿನ ದಿನಗಳಲ್ಲಿ ನಾಚಿಕೆಯನ್ನು ಸಿನಿಮಾಗಳಲ್ಲಷ್ಟೇ ನೋಡ ಬೇಕಾಗುತ್ತೇನೋ.......(ಹಾಗಂತ ಹೇಳಿ ನಾನು ಬಂದಾಗ ಅಪ್ಪ ಅಮ್ಮ ಇದ್ದಾರೆ ಅಂತ ನಾಚಿಕೆ ಪಟ್ಕೋ ಬೇಡ ಮಾರಾಯ್ತಿ, ಏಕೇಂದ್ರೆ ಪ್ರಪಂಚದಲ್ಲಿ ನಾಚಿಕೆ ಬಿಡಲು ಹಕ್ಕುಳ್ಳವರೆಂದರೆ ಅದು "ಪ್ರೇಮಿಗಳು" ಮಾತ್ರ.....